Wednesday, 21 December 2016

ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಒತ್ತಾಯ

ಶಿಡ್ಲಘಟ್ಟ: ಮೀಸಲು ಕುರಿತಂತೆ ನ್ಯಾ. ಸದಾಶಿವ ಆಯೋಗವು ನೀಡಿರುವ ವರದಿಯನ್ನು ಯಾವುದೆ ಕಾರಣಕ್ಕೂ ಅನುಷ್ಠಾನಗೊಳಿಸದೆ ತಿರಸ್ಕರಿಸುವಂತೆ ಭೋವಿ ಸಮುದಾಯದ ಮುಖಂಡರು ಸರಕಾರವನ್ನು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸುಮಾರು 35 ಲಕ್ಷ ಮಂದಿ ಬೋವಿ ಸಮುದಾಯದ ಜನಸಂಖ್ಯೆಯಿದ್ದರೂ ಕೇವಲ ಶೇ.1ರಷ್ಟು ಮೀಸಲು ನಿಗದಿಪಡಿಸಿ ನ್ಯಾ. ಸದಾಶಿವ ಆಯೋಗವು ಶಿಫಾರಸು ಮಾಡಿರುವುದು ಅವೈಜ್ಞಾನಿಕವಾಗಿದೆ. ಯಾವುದೆ ಕಾರಣಕ್ಕೂ ಆಯೋಗದ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಳ್ಳಬಾರದೆಂದು ಸರಕಾರವನ್ನು ಆಗ್ರಹಿಸಿದರು.

ಆಧುನಿಕ ಕಾಲದಲ್ಲೂ ಸಮುದಾಯದ ಅರ್ಧ ಮಂದಿ ಈಗಲೂ ಊರಿಂದ ಊರಿಗೆ ಅಲೆದಾಡಿಕೊಂಡು ಕಲ್ಲು ಬಂಡೆಗಳನ್ನು ಹೊಡೆದು ಕಲ್ಲು ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅಲೆಮಾರಿ ಬದುಕು ನಡೆಸುತ್ತಿರುವ ಬಹುತೇಕ ಮಂದಿ ತಾವೂ ಶಿಕ್ಷಣ ಪಡೆದಿಲ್ಲ. ಜತೆಗೆ ತಮ್ಮ ಮಕ್ಕಳಿಗೂ ಶಿಕ್ಷಣ ಕೊಡಿಸಿಲ್ಲ.


ಇದರಿಂದಾಗಿ ಭೋವಿ ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಸದಾಶಿವ ಆಯೋಗದ ಶಿಫಾರಸುಗಳೇನಾದರೂ ಅನುಷ್ಠಾನಗೊಂಡರೆ ಸಮುದಾಯದವರು ಯಾವುದೆ ಕಾರಣಕ್ಕೂ ಅಭಿವೃದ್ಧಿ ಹೊಂದಲು ಅವಕಾಶ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಒಳಮೀಸಲನ್ನು ರದ್ದುಪಡಿಸಿದ್ದರೂ ಕೂಡ ಸದಾಶಿವ ಆಯೋಗವು ನಮ್ಮ ಸಮುದಾಯಕ್ಕೆ ಶೇ.1ರಷ್ಟು ಒಳಮೀಸಲು ನೀಡುವಂತೆ ಶಿಫಾರಸು ಮಾಡುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಅಲ್ಲದೆ ಮತ್ತೊಂದು ಕಡೆ ಸಮುದಾಯವನ್ನು ಎಲ್ಲಾ ರೀತಿಯಿಂದಲೂ ತುಳಿಯಲು ಉದ್ದೇಶಪೂರ್ವಕವಾಗಿ ಇಂತಹ ಶಿಫಾರಸನ್ನು ಮಾಡಿದೆ ಎಂದು ದೂರಿದರು.

ಹಾಗಾಗಿ ಯಾವುದೆ ಕಾರಣಕ್ಕೂ ಸದಾಶಿವ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೋವಿ ಸಮುದಾಯದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ಅವೈಜ್ಞಾನಿಕ ಹಾಗೂ ಭೋವಿ ಸಮಾಜದ ಅಭಿವೃದ್ಧಿಗೆ ಮಾರಕವಾದ ಸದಾಶಿವ ಆಯೋಗದ ವರದಿ ಕುರಿತು ಸಮುದಾಯದವರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದ್ದು ವರದಿಯನ್ನು ತಿರಸ್ಕರಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಲು ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದರು.

ಭೋವಿ ಸಮುದಾಯದ ಜಿಲ್ಲಾಧ್ಯಕ್ಷ ಜಿ.ಎಚ್. ಮುನಿಯಪ್ಪ, ಕಾರ್ಯಾಧ್ಯಕ್ಷ ಪಿ.ಡಿ. ವೆಂಕಟರಾಮ್, ಜಿಲ್ಲಾ ಉಪಾಧ್ಯಕ್ಷ ಎಂ.ಶ್ರೀನಿವಾಸ್, ಎನ್.ಜಯರಾಂ, ಖಜಾಂಚಿ ಎಲ್.ಮೂರ್ತಿ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಚಿಕ್ಕನರಸಿಂಹಪ್ಪ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ವಿ.ಕೆ. ಮೂರ್ತಿ, ಮುಖಂಡರಾದ ಬ್ಯಾಟರಾಯಪ್ಪ ಹಾಜರಿದ್ದರು.


ವಿಕ ಸುದ್ದಿಲೋಕ| Updated: Jul 10, 2012,

No comments:

Post a Comment