Wednesday, 21 December 2016

ಸದಾಶಿವ ಆಯೋಗ ವರದಿ ರದ್ದುಪಡಿಸಲು ಭೋವಿ ಸಮಾಜ ಒತ್ತಾಯ

ಬೆಳಗಾವಿ :ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಭೋವಿ(ವಡ್ಡರ)ಸೇವಾ ಸಂಘ ಹಾಗೂ ಮಾಂಗ ಗಾರುಡಿ ಸಮಾಜದವರು ಜಂಟಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು. 

ರಾಜ್ಯದಲ್ಲಿ ಅನೇಕ ಪರಿಶಿಷ್ಟ ಜಾತಿ, ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರ ಹಿಂದುಳಿದ ಅಸಹಾಯಕ, ಅಸಂಘಟಿತ, ದಲಿತ, ಶ್ರಮಿಕ ಜಾತಿಗಳಾಗಿವೆ. ಈ ಸಮುದಾಯಗಳ ಶೇ.90ರಷ್ಟು ಜನ ಕೂಲಿನಾಲಿಯಿಂದ ಜೀವನ ಸಾಗಿಸುತ್ತಿದ್ದು ತಲೆತಲಾಂತರಗಳಿಂದ ಶೋಷಣೆ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾಗಿ ಬಂದಿವೆ. ಸಂವಿಧಾನಬದ್ಧ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸೌಲಭ್ಯಗಳು ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಈ ಜಾತಿಗಳ ಓಣಿಗಳಲ್ಲಿ, ವಸತಿಗಳಲ್ಲಿ ಪರಿಶೀಲಿಸಿದರೆ ಸತ್ಯ ಸ್ಥಿತಿ ಗೊತ್ತಾಗುತ್ತದೆ. 

ಆದರೆ ನ್ಯಾ.ಮೂ. ಎ. ಜೆ. ಸದಾಶಿವ ಆಯೋಗ ಯಾವುದೇ ರೀತಿಯ ಸತ್ಯ ಪರಿಸ್ಥಿತಿ ಪರಿಶೀಲಿಸಿದೆ ಯಾವುದೋ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರದಿಂದ ವರದಿ ತಯಾರಿಸಿದ್ದು ಇದರಿಂದ ಅನೇಕ ಪರಿಶಿಷ್ಟ ಜಾತಿ, ಸಮುದಾಯಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ಈ ವರದಿಯನ್ನು ರಾಜ್ಯ ಸರಕಾರ ರದ್ದುಪಡಿಸಬೇಕು ಎಂದು ಭೋವಿ(ವಡ್ಡರ) ಸೇವಾ ಸಂಘ ಹಾಗೂ ಮಾಂಗ ಗಾರುಡಿ ಸಮಾಜದವರು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಪ್ರತಿಭಟನೆಯಲ್ಲಿ ಶಿವಾಜಿ ಗಾಡಿವಡ್ಡರ, ದುರ್ಗಪ್ಪಾ ಬಡಸಕರ, ಶಂಕರ ಗಾಡಿವಡ್ಡರ, ರಾಜು ಬೆಳಗಾಂವಕರ, ಹನುಮಂತ ಗಾಡಿವಡ್ಡರ, ತೇಜಾ ಪವಾರ, ಅಂಜು ಬಳ್ಳಾರಿ ಮತ್ತಿತರರು ಭಾಗವಹಿಸಿದ್ದರು. 


ಬೆಳಗಾವಿ ವರದಿ.  21 ಜುಲೈ 2014. ವಿಜಯಕರ್ನಾಟಕ. 

No comments:

Post a Comment