Wednesday, 21 December 2016

‘ಸದಾಶಿವ ಆಯೋಗ ವರದಿ ತಿರಸ್ಕರಿಸಿ’ (ಮಸ್ಕಿ)

ಮಸ್ಕಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಸದಾಶಿವ ಆಯೋಗ ವರದಿ ವಿರೋಧಿ ಒಕ್ಕೂಟದ ಸದಸ್ಯರು ಬುಧವಾರ ಪ್ರತಿಭಟನಾ ರಾರ‍ಯಲಿ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಗಳಾದ ತೇರ್‌ ಬಜಾರ್‌, ದೈವದಕಟ್ಟೆ, ಮೇನ್‌ ಬಜಾರ್‌, ಡಾ.ಖಲೀಲ್‌ ಅಹ್ಮದ್‌ ವೃತ್ತದ ಮೂಲಕ ರಾರ‍ಯಲಿ ಹಳೆ ಬಸ್‌ ನಿಲ್ದಾಣ ತಲುಪಿತು. ಪ್ರತಿಭಟನೆಯುದ್ದಕ್ಕೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಶಾಸಕ ಸ್ಥಾನದಿಂದ ವಜಾಗೊಳಿಸಬೇಕು, ಸದಾಶಿವ ಆಯೋಗದ ವರದಿ ವಿರೋಧಿಸಿದ 12 ಶಾಸಕರ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯಲ್ಲ, ಆಯೋಗದ ವರದಿ ಜಾರಿಯಾದರೆ 99 ಜಾತಿಗಳಿಗೆ ಅನ್ಯಾಯವಾಗುತ್ತದೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು.
ನಂತರ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ಪ್ರತಿಕೃತಿ ದಹನ ಮಾಡಿ ವಿಶೇಷ ತಹಸೀಲ್ದಾರ್‌ ಅನಿಲಕುಮಾರ ಅರೋಲಿಕರ್‌ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದುರುಗಪ್ಪ ಚಿಗರಿ, ಶೇಖರಪ್ಪ ಬೆಳಗಲ್‌, ಜೋಸೆಫ್‌ ಮೆದಕಿನಾಳ, ಮಲ್ಲಯ್ಯ ಗುಡಸಲಿ, ಅಮರೇಶ ರಾಥೋಡ್‌, ರಂಗಪ್ಪ ಅರಿಕೇರಿ, ದೇವಣ್ಣ ಜಾಧವ್‌, ಸಾರಪ್ಪ ಬಂಗಾಲಿ, ಮಲ್ಲಯ್ಯ ನಾಗರಾಳ, ರವಿಕುಮಾರ ಚಿಗರಿ, ಮಲ್ಲಯ್ಯ ಚಾವಣಿ, ರಮೇಶ ಗುಡಸಲಿ, ಆನಂದ ಬನಗಲ್‌, ತಿಮ್ಮಣ್ಣ ಗುಡಸಲಿ, ವೀರೇಶ ಬಡಗಿ, ಆಂಜನೇಯ ಆನೆಹೊಸೂರು, ಆನಂದ್‌, ಹುಸೇನಪ್ಪ, ಮುತ್ತಣ್ಣ ಹಸಮಕಲ್‌, ಬಸವರಾಜ ಹಟ್ಟಿ, ದುರುಗಪ್ಪ ಲಿಂಗಸುಗೂರು, ಶಿವರಾಜ ಹಸಮಕಲ್‌ ಇದ್ದರು.

No comments:

Post a Comment